ರಾಯ್ಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಶವಾಗಾರದಲ್ಲಿ ಇಡಲು ಸಾಧ್ಯವಾಗದೆ, ಆಸ್ಪತ್ರೆಯ ಹೊರಗಡೆ ಬಿಸಿಲಿನಲ್ಲಿ ಸ್ಟ್ರೆಚರ್ ಮೇಲೆ ಮಲಗಿಸಿರುವ ಚಿತ್ರಗಳನ್ನು ಎನ್ಡಿಟಿವಿ ವರದಿ ಮಾಡಿದೆ.
ಛತ್ತೀಸ್ಗಢ ಕೊರೊನಾ ಎರಡನೇ ಅಲೆಗೆ ತತ್ತರಿಸಿದೆ. ಕೊರೊನಾ ವೈರಸ್ನಿಂದ ಹೆಚ್ಚು ಹಾನಿಗೊಳಗಾದ ದೇಶದ 10 ರಾಜ್ಯಗಳಲ್ಲಿ ಛತ್ತೀಸ್ಗಢ ಕೂಡ ಒಂದು. ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವ ರಾಯ್ಪುರ ಮತ್ತು ದುರ್ಗ್ ಜಿಲ್ಲೆಗಳು ಸಂಪೂರ್ಣ ಲಾಕ್ಡೌನ್ ಹಂತದಲ್ಲಿವೆ.
ಕೊರೊನಾ ಉಲ್ಬಣದಿಂದ ಮರಣ ಪ್ರಮಾಣ ಹೆಚ್ಚಾಗಿದ್ದು, ರಾಯ್ಪುರದ ಡಾ.ಭೀಮ್ರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲು ಸ್ಥಳಾವಕಾಶವಿಲ್ಲ. ಈಗ ಲಭ್ಯವಿರುವ ಸ್ಥಳಗಳಲ್ಲಿ ಎಲ್ಲಿಯಾದರೂ ಶವಗಳನ್ನು ಇರಿಸಲಾಗುತ್ತಿದೆ.
ಇದರ ಕುರಿತು ಆಸ್ಪತ್ರೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೊರೊನಾದಿಂದ ಸಾವನ್ನಪ್ಪುತ್ತಿರುವ ರೋಗಿಗಳ ಶವಗಳನ್ನು ಶವಸಂಸ್ಕಾರ ಮಾಡುವುದಕ್ಕಿಂತ ವೇಗವಾಗಿ ಶವಾಗಾರದಲ್ಲಿ ರಾಶಿ ರಾಶಿ ಶವಗಳು ಬರುತ್ತಿವೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ರಾಯ್ಪುರ ಆಸ್ಪತ್ರೆಯ ತೀವ್ರ ನಿಗಾ ಘಟಕಗಳು ಮತ್ತು ಆಮ್ಲಜನಕ-ಸುಸಜ್ಜಿತ ಹಾಸಿಗೆಗಳು ಕಳೆದ ಒಂದು ವಾರದಿಂದ ಸುಮಾರು ನೂರರಷ್ಟು ಭರ್ತಿಯಾಗುತ್ತಿವೆ. ಅಧಿಕೃತ ಮೂಲಗಳ ಪ್ರಕಾರ, ರಾಯ್ಪುರ ನಗರದಲ್ಲಿ ಪ್ರತಿದಿನ ಸರಾಸರಿ 55 ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಅವುಗಳಲ್ಲಿ ಹೆಚ್ಚಿನವು ಕೊರೊನಾ ಸೋಂಕಿತರ ಶವಗಳಾಗಿವೆ.
“ಒಂದೇ ಬಾರಿಗೆ ಇಷ್ಟೊಂದು ಸಾವುಗಳು ಸಂಭವಿಸುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಸಾಮಾನ್ಯ ಸಂಖ್ಯೆಯ ಸಾವುಗಳಿಗೆ ನಾವು ಸಾಕಷ್ಟು ಫ್ರೀಜರ್ಗಳನ್ನು ಹೊಂದಿದ್ದೇವೆ. ಆದರೆ ಒಂದರಿಂದ ಎರಡು ಸಾವುಗಳು ಸಂಭವಿಸುವ ಸ್ಥಳದಲ್ಲಿ 10-20 ವರದಿಯಾಗುತ್ತಿವೆ. 10-20, 50-60 ಜನರು ಮೃತಪಡುತ್ತಿದ್ದಾರೆ. ಒಂದೇ ಬಾರಿಗೆ ಎಷ್ಟು ಜನರಿಗೆ ಫ್ರೀಜರ್ಗಳನ್ನು ವ್ಯವಸ್ಥೆಗೊಳಿಸಬಹುದು?”ಎಂದು ರಾಯ್ಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮೀರಾ ಪ್ರಶ್ನಿಸಿದ್ದಾರೆ.
“ಕೊರೊನಾ ವಿರುದ್ಧ ಗೆಲ್ಲುತ್ತಿದ್ದೇವೆ ಎಂದು ಹೋಂ ಐಸೋಲೇಷನ್ಗೆ ಪ್ರಾಮುಖ್ಯತೆ ನೀಡುತ್ತಿದ್ದೇವು. ಅಷ್ಟರಲ್ಲಿ ಈ ಹೊಸ ಎರಡನೇ ಅಲೆ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಲಕ್ಷಣರಹಿತ ರೋಗಿಗಳು ಸಹ ಬೇಗನೇ ಅಸ್ವಸ್ಥರಾಗುತ್ತಿದ್ದಾರೆ. ಜೊತೆಗೆ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ” ಎಂದು ಹೇಳಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News