
ಹುಬ್ಬಳ್ಳಿ : ರಾವಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಉತ್ತರ ಕರ್ನಾಟಕದ ಯುವ ಪ್ರತಿಭೆ ರಾವಣ ಕತ್ತಿ ಅಭಿನಯಿಸಿ ನಿರ್ದೇಶಿಸಿರುವ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿರುವ ರಾವಣಾಸುರುಡು ಚಿತ್ರ ಬೆಳ್ಳಿತೆರೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ.
ಹುಬ್ಬಳ್ಳಿಯ ಪತ್ರಿಕಾ ಭವನಲ್ಲಿ ಹಾಡಿನ ಧ್ವನಿಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಕುರಿತು ನಾಯಕನಟ ರಾವಣ ಮಾಹಿತಿಯನ್ನು ಹಂಚಿಕೊಂಡರು. ಮೂಲತಃ ಬೆಲ್ಲದ ಬಾಗೇವಾಡಿಯವರಾಗಿದ್ದು ಬೈಲಹೊಂಗಲದಲ್ಲಿ ಕೇಬಲ್ ನೆಟ್ವರ್ಕ್ ಉದ್ಯಮವನ್ನು ನಡೆಸುತ್ತಿದ್ದೇನೆ. ಈ ಹಿಂದೆ ಕನ್ನಡದಲ್ಲಿ ‘ಹಾ’ ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದೆ. ತೆಲುಗಿನ ಅಶೋಕ್ ರೆಡ್ಡಿ ಮತ್ತು ಡಾಕ್ಟರ್ ರಾಬರ್ಟ್ ಎನ್ನುವ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದು ಇದೀಗ ರಾವಣಾಸುರುಡು ಎಂಬ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿರುವೆ.
ತಾರಾ ಬಳಗದಲ್ಲಿ ಬಹುತೇಕ ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿದ್ದು ಸುರೇಶ್ ಕರಜಗಿ, ಸುನಿಲ್ ತಳವಾರ್, ವಿದ್ಯಾಟರ್ಕಿ, ಭೂಪಾಲ್ ಅತ್ತು , ಅರವಿಂದ್ ಮುಳಗುಂದ, ಅರುಂಧತಿ , ಹುಬ್ಬಳ್ಳಿಯ ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದಿರುವ ರವಿಕುಮಾರ್, ಮುರುಳಿ ಕೃಷ್ಣ, ತೇಜಸ್ವಿ , ಪ್ರಕಾಶ್ ಕಡಕೋಳ ಹಾಗೂ ನಾಯಕಿಯಾಗಿ ರಂಭ ಅಭಿನಯಿಸಿದ್ದಾರೆ. ಚಿತ್ರದುರ್ಗದ ಮುನ್ನ ಸಂಗೀತ ನೀಡಿದ್ದು, ವಿನು ಮನಸು ಬ್ಯಾಗ್ರೌಂಡ್ ಸ್ಕೋರ್ ಮಾಡಿದ್ದಾರೆ. ಬೆಳಗಾವಿಯ ವಿಶ್ವನಾಥ್ ತಲೂರಕರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎರಡು ಹಾಡುಗಳನ್ನು ತೆಲುಗಿನ ಗಾಯಕರು ಹಾಡಿದ್ದು, ಇನ್ನುಳಿದ ಹಾಡುಗಳನ್ನು ಕನ್ನಡದ ಗಾಯಕ ಗಾಯಕಿಯರು ಮತ್ತು ಹುಬ್ಬಳ್ಳಿಯವರೊಬ್ಬರು ಹಾಡಿದ್ದಾರೆ. ಪಿ.ಆರ್.ಓ. ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ನಿರ್ಮಾಪಕರು ಗುರು ಕತ್ತಿ ಆಗಿದ್ದಾರೆ. ಬೆಳಗಾವಿ, ಗೋವಾ, ಕರ್ನೂಲ, ಶಿರಸಿಯ ಕಾಡು ವಲಯ , ಹೊನ್ನಾವರದ ಬೀಚ್ಗಳಲ್ಲಿ ಚಿತ್ರೀಕರಿಸಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು ಇಲ್ಲಿ ಬರುವಂತಹ ತಿರುವುಗಳು ಗೊಂದಲಗಳು ಚಿತ್ರದ ವೇಗವನ್ನು ಹೆಚ್ಚಿಸುತ್ತವೆ. ಈ ಚಿತ್ರವನ್ನು ಸ್ವಲ್ಪ ತಾಳ್ಮೆ ಮತ್ತು ಸ್ವಲ್ಪ ಜಾಣ್ಮೆಯಿಂದ ನೋಡಿದಾಗ ಮಾತ್ರ ಸಂಪೂರ್ಣವಾಗಿ ಅರ್ಥವಾಗುತ್ತದೆ ಎಂದರು.
ಈಗಾಗಲೇ ತೆಲುಗಿನ ಆವೃತ್ತಿ ಸೆನ್ಸಾರ್ ಆಗಿದ್ದರಿಂದ ಮೊದಲಿಗೆ ಹೈದ್ರಾಬಾದ್ ಮತ್ತು ಕರ್ನಾಟಕದಲ್ಲಿ ಅಗಷ್ಟ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಂತರ ಕನ್ನಡ, ತಮಿಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ಮಾಪಕ ಗುರು ಕತ್ತಿ ತಿಳಿಸಿದರು. ಈ ಸಂದರ್ಭದಲ್ಲಿ ಚಿತ್ರ ತಂಡದ ಸುನಿಲ್ ತಳವಾರ್, ಪ್ರಕಾಶ್ ಕಡಕೋಳ, ಅರವಿಂದ ಮುಳಗುಂದ, ನಾಯಕಿ ರಂಭಾ, ವಿಶ್ವನಾಥ ತಲೂರಕರ, ಡಾ.ಪ್ರಭುಗಂಜಿಹಾಳ, ಡಾ.ವೀರೇಶ ಹಂಡಗಿ ಪ್ರಮುಖರು ಹಾಜರಿದ್ದರು.
**
ವರದಿ : ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬
