ಹೆಚ್ಐವಿ ಮೂಲ ಮಾಹಿತಿ ಮತ್ತು ಹೆಚ್ಐವಿ ಕಾಯ್ದೆ ಕುರಿತು ತರಬೇತಿ ಕಾರ್ಯಾಗಾರ
ಬಳ್ಳಾರಿ : ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಹೆಚ್ಐವಿ ಮೂಲ ಮಾಹಿತಿ ಮತ್ತು ಹೆಚ್ಐವಿ ಕಾಯ್ದೆ ಕುರಿತು ತಾಲೂಕು ಆರೋಗ್ಯ ಅಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಪ್ಯಾನಲ್ ವಕೀಲರಿಗೆ ಮತ್ತು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಅರ್ಜುನ್ ಮಲ್ಲೂರ್ ಅವರು ಹೆಚ್ಐವಿ ಕಾಯಿದೆಯು ಸಮಾಜದಲ್ಲಿ ಬದುಕುತ್ತಿರುವವರು ಮತ್ತು ಕುಟುಂಬ ಸದಸ್ಯರನ್ನು ರಕ್ಷಿಸುವ ಗುರಿ ಹೊಂದಿದೆ. ಈ ಕಾಯ್ದೆಯು ಮೊಟ್ಟ ಮೊದಲನೆಯ ಬಾರಿಗೆ ಖಾಸಗಿ ವಲಯದಲ್ಲಿನ ತಾರತಮ್ಯವನ್ನು ಪರದೆಯೊಳಗೆ ಸೇರಿಸಿದೆ. ಇದರಿಂದ ಯಾವುದೇ ತಾರತಮ್ಯದ ವಿರುದ್ಧ ಕಾನೂನಿನ ರಕ್ಷಣೆಯ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.
ಪ್ರಜ್ಞಾಪೂರ್ವಕ ಸಮ್ಮತಿ ಇಲ್ಲದೆ ಹೆಚ್ಐವಿ ಪರೀಕ್ಷೆ ಮಾಡುವಂತಿಲ್ಲ. ಹೆಚ್ಐವಿ ಏಡ್ಸ್ ಸಂಬAಧಿತ ಚಿಕಿತ್ಸೆಯ ಹಕ್ಕನ್ನು ನೀಡಲಾಗಿದೆ ಮತ್ತು ಸುರಕ್ಷಿತವಾದ ವಾತಾವರಣದಲ್ಲಿ ಕೆಲಸ ಮಾಡುವ ಹಕ್ಕನ್ನು ಇತರ ಎಲ್ಲ ವ್ಯಕ್ತಿಗಳಂತೆ ಯಾವುದೇ ತಾರತಮ್ಯವಿಲ್ಲದೆ ಅವಕಾಶ ಕಾಯ್ದೆಯಲ್ಲಿ ಕೊಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಮೋಹನಕುಮಾರಿ, ನ್ಯಾಯವಾದಿಗಳಾದ ಚಂದ್ರಪ್ಪ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕರಾದ ಜಿ.ಎನ್.ಗಣೇಶ್ ಗಿರೀಶ್ ಸೇರಿದಂತೆ ಇತರರು ಇದ್ದರು.