ಬೆಂಗಳೂರು : ಕೋವಿಡ್-19 ಸಂದರ್ಭದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ, ಉದ್ಯೋಗ ಕಳೆದುಕೊಂಡವರಿಗೆ ಅನುಕೂಲ ಕಲ್ಪಿಸಲು ಸೆಪ್ಟಂಬರ್ 16ರಂದು ಹಲವು ಸ್ಥಳಗಳಲ್ಲಿ ‘ಸಾಲಮೇಳ ‘ ಆಯೋಜನೆ ಮಾಡಲು ಸರ್ಕಾರ ಮುಂದಾಗಿದೆ.
ಇದರಿಂದ ಉದ್ಯೋಗ ಕಳೆದುಕೊಂಡ ಸಾವಿರಾರು ಮಂದಿಗೆ ಅನುಕೂಲವಾಗುತ್ತದೆ. ಸಾಲ ಮೇಳದ ಪ್ರಮುಖ ಆಕರ್ಷಣೆ ಎಂದರೆ ಮೂರು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿದೆ . 3 ಲಕ್ಷ ರೂ.ನಿಂದ 10 ಲಕ್ಷ ರೂ. ವರೆಗಿನ ಸಾಲಗಳಿಗೆ ಶೇ.3ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಸ್ಟಾರ್ಟ್ ಅಪ್ಗಳಿಗೆ ಆರ್ಬಿಐನಿಂದ ಸುಲಭ ಸಾಲದ ವ್ಯವಸ್ಥೆಯಿದೆ. ಈ ಹಣವನ್ನು ರಾಜ್ಯ ಸರ್ಕಾರದ ಜೊತೆಗೆ ‘ಆತ್ಮ ನಿರ್ಭಾರ ಭಾರತ್’ ನಿಧಿಯಿಂದ ಬಿಡುಗಡೆ ಮಾಡಲಾಗುತ್ತದೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಲ ಮೇಳದ ಕಾರ್ಯಕ್ರಮ ಪ್ರಾರಂಭಿಸುವ ಸಾಧ್ಯತೆ ಇದೆ.
ಅದಕ್ಕೂ ಮೊದಲು ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿನಿಂದಾಗಿ ಮಾರ್ಚ್ ಅಂತ್ಯದಲ್ಲಿ ಲಾಕ್ಡೌನ್ ಘೋಷಣೆ ಆದಾಗಿನಿಂದಲೂ ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ನೇಕಾರರು, ಮಹಿಳಾ ಸಹಾಯ ಗುಂಪುಗಳು, ಹೋಟೆಲ್, ಕೃಷಿ ಕಾರ್ಮಿಕರು ಮತ್ತು ರೇಷ್ಮೆ ಬೆಳೆಗಾರರು, ತೋಟಗಾರಿಕೆ ಬೆಳೆಗಾರರು ಹಾಗೂ ಇನ್ನೂ ಅನೇಕ ವ್ಯಾಪಾರಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಅವರ ನೆರವಿಗೆ ಧಾವಿಸಿರುವ ಸರ್ಕಾರ, ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ನೀಡುವ ಯೋಜನೆಗೆ ಮುಂದಾಗಿದೆ.
ಸಾಲ ಮೇಳ ಎಲ್ಲೆಲ್ಲಿ?: ಸಾಲ ಮೇಳವನ್ನು ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಆಯೋಜಿಸಲಾಗುತ್ತದೆ. ವಿವಿಧ ಸಹಕಾರಿ ಬ್ಯಾಂಕುಗಳು ಸಾಲದ ಮೊತ್ತ ವಿತರಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಹಿಂದೆ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಇದೇ ರೀತಿ ಯೋಜನೆ ಪ್ರಾರಂಭಿಸಲಾಯಿತು.
ಆ ಯೋಜನೆಯಲ್ಲಿ ಶೂನ್ಯ ಬಡ್ಡಿದರದೊಂದಿಗೆ ಸಾಲ ನೀಡಲಾಯಿತು. ಆದಾಗ್ಯೂ, ಈ ವರ್ಷದ ಬಜೆಟ್ನಲ್ಲಿ ಬಿಜೆಪಿ ಸರ್ಕಾರ ಹಣ ಮಂಜೂರು ಮಾಡಿಲ್ಲ. ಈಗ ಹೊಸ ಉಪಕ್ರಮದಡಿ ಬೀದಿ ಬದಿ ವ್ಯಾಪಾರಿಗಳಿಗೂ ಕೂಡ ಸಾಲ ನೀಡಲಾಗುತ್ತದೆ ಎನ್ನಲಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News