ಬಾಗಲಕೋಟೆ : ಕೋವಿಡ್ 2 ಅಲೆಗೆ ತುತ್ತಾದ ಸೋಂಕಿತರಿಗೆ ರೆಮ್ಡಿಸ್ವಿಯರ್ ಚುಚ್ಚು ಸಿಗುತ್ತಿಲ್ಲ ಎಂಬ ಹಾಹಾಕಾರ ಎಲ್ಲೆಡೆ ಕೇಳಿ ಬರುತ್ತಿದ್ದರೆ, ಇಲ್ಲಿನ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ನಗರದ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸೇರಿ ಈ ಚುಚ್ಚು ಮದ್ದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಜಾಲ ಪತ್ತೆಯಾಗಿದೆ.
ಈ ಕುರಿತು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೋಮವಾರ ಸಂಜೆ ಪತ್ರಿಕೆಗೆ ಮಾಹಿತಿ ನೀಡಿದ್ದು, ಈ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಹಾಗೂ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ 8 ಜನ ವ್ಯಕ್ತಿಗಳು ಕೂಡಿಕೊಂಡು, ಒಂದು ರೆಮ್ಡಿಸ್ವಿಯರ್ ಚುಚ್ಚು ಮದ್ದನ್ನು 18ರಿಂದ 25 ಸಾವಿರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿಯೇ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಠ್ಠಲ ಚಲವಾದಿ, ರಂಗಪ್ಪ ದಿಂಟೆ, ರಾಜು ಗುಡಿಮನಿ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಗೇರ, ಶ್ರೀಕಾಂತ ಲಮಾಣಿ, ಗಣೇಶ ಸಿದ್ದಪ್ಪ ನಾಟಿಕಾರ, ಪ್ರವೀಣ ಕೋತ್ಲಿ, ಮಹಾಂತಗೌಡ ಬಿರಾದಾರ ಎಂಬುವವರನ್ನು ಬಂಧಿಸಲಾಗಿದೆ ಎಂದರು.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಹಾಗೂ ಸಿಇಎನ್ ಕ್ರೈ ಪೊಲೀಸ್ ಠಾಣೆಯ ಪಿಐ ಮಲ್ಲಯ್ಯ ಮಠಪತಿ ಹಾಗೂ ಸಿಬ್ಬಂದಿ ಕೂಡಿಕೊಂಡು ದಾಳಿ ನಡೆಸಿದ್ದು, ಅವರಿಂದ 14 ತುಂಬಿದ ರೆಮ್ಡಿಸ್ವಿಯರ್ ಇಂಜೆಕ್ಷನ್ ವೈಲ್ ಹಾಗೂ 2 ಖಾಲಿ ರೆಮ್ಡಿಸ್ವಿಯರ್ ವೈಲ್ ಮತ್ತು 30 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.
11 ಜನ ಆರೋಪಿತರ ವಿರುದ್ಧ ಕಠೀಣ ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಈ ಕುರಿತು ತನಿಖೆ ಚುರುಕುಗೊಂಡಿದೆ. ಇಂತಹ ಪ್ರಕರಣದಲ್ಲಿ ಯಾರೇ ಭಾಗಿಯಾದರೂ ಅವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ದಾಳಿಯಲ್ಲಿ ಬಾಗಲಕೋಟೆ ಶಹರ ಠಾಣೆಯ ಪಿಐ ವಿಜಯ ಮುರಗುಂಡಿ, ಸಿಇಎನ್ ಕ್ರೈ ಠಾಣೆಯ ಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಮಣಿಕಂಠ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಾಳಿ ನಡೆಸಿದ ಪೊಲೀಸ್ ಅಽಕಾರಿ-ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ಲೋಕೇಶ ತಿಳಿಸಿದರು.
ಜಿಲ್ಲೆಯಲ್ಲಿ ರೆಮ್ಡಿಸ್ವಿಯರ್ ಕೊರತೆ ಇದೆ ಎಂಬ ವದಂತಿ ಹಬ್ಬಿಸಿ, ಅದನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ ಮಾಡಲಾಗಿದೆ. ಇದು ನಗರಕ್ಕೆ ಸಂಬಂಧಿಸಿದ್ದಾಗಿದ್ದು, 11 ಜನರನ್ನು ಬಂಧಿಸಲಾಗಿದೆ. ಮೂವರು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, ಏಳು ಜನ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯಾಗಿದ್ದಾರೆ. ಇವರೆಲ್ಲ 18ರಿಂದ 25 ಸಾವಿರಕ್ಕೆ ರೆಮ್ಡಿಸ್ವಿಯರ್ ಮಾರುತ್ತಿದ್ದ ವೇಳೆ ಸಿಕ್ಕು ಬಿದ್ದಿದ್ದಾರೆ. ಜಿಲ್ಲಾ ಆಸ್ಪತ್ರೆಯಿಂದ ಕಳ್ಳ ಸಾಗಣೆ ಮಾಡಿ, ರೋಗಿಗಳಿಗೆ ಬಳಸುತ್ತಿದ್ದ ಖಾಸಗಿ ಆಸ್ಪತ್ರೆ ವೈದ್ಯರ ಕುರಿತೂ ತನಿಖೆ ನಡೆಸಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠೀಣ ಕ್ರಮ ಕೈಗೊಳ್ಳಲಾಗುವುದು.–ಲೋಕೇಶ ಜಗಲಾಸರ, ಎಸ್ಪಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News