Breaking News

ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ. ಕಡುಬಡತನದ ನಡುವೆಯೂ ಅವರು ತಮ್ಮ ಒಲಂಪಿಕ್‌ ಕನಸನ್ನು ಕೈಬಿಡಲಿಲ್ಲ.

ಒಲಂಪಿಕ್ ಕನಸು ಕಾಣದ ಕ್ರೀಡಾಪಟುಗಳೇ ಇಲ್ಲ ಎನ್ನಬಹುದು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆ ಮತ್ತು ಕನಸು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಇರುತ್ತದೆ. ಬಹುತೇಕ ಕ್ರೀಡಾಪಟುಗಳು ಆರ್ಥಿಕ, ಕೌಟುಂಬಿಕ ಮತ್ತು ವಯಕ್ತಿಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳ ಕಾರಣದಿಂದ ಒಲಂಪಿಕ್ ಹಾದಿಯನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಕೆಲವೇ ಕೆಲವರು  ಛಲ ಬಿಡದ ತ್ರಿವಿಕ್ರಮನಂತೆ ಜಿದ್ದಿಗೆ ಬಿದ್ದು ಅತ್ಯುನ್ನತ ಕ್ರೀಡಾಕೂಟಕ್ಕೆ ಟಿಕೇಟ್ ಗಿಟ್ಟಿಸಿಕೊಳ್ಳುತ್ತಾರೆ. ಅಂತಹ ಛಲಗಾರ್ತಿ ತಮಿಳುನಾಡಿನ  ರೇವತಿ. ಜೀವನಕ್ಕೆ ಉದ್ಯೋಗ ಮಾಡುವುದು ರೈಲ್ವೆ ಟಿಕೆಟ್‌ ಕಲೆಕ್ಟರ್‌ ಆಗಿ. ಆದರೆ ಕನಸು ಒಲಂಪಿಕ್‌ನದ್ದು. ಮಧುರೈ ರೈಲ್ವೆ ನಿಲ್ಧಾಣದಲ್ಲಿ ಟಿಕೆಟ್‌ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿರುವ 23 ವರ್ಷದ ರೇವತಿ ವೀರಮಣಿ 400 ಮೀಟರ್‌ ರಿಲೇಯಲ್ಲಿ ಒಲಂಪಿಕ್ಗೆ ಅರ್ಹತೆ ಪಡೆದಿದ್ದಾರೆ.

ರೇವತಿ ಸಾಧನೆಗೆ ದಕ್ಷಿಣ ರೈಲ್ವೆ ಅಭಿನಂದಿಸಿದ್ದು ಒಲಂಪಿಕ್‌ನಲ್ಲಿ ಅವರು ಚಿನ್ನವನ್ನು ಗೆದ್ದು ಬರಲಿ ಎಂದು ಹಾರೈಸಿದೆ.

https://twitter.com/GMSRailway/status/1412420732127223814?s=19

ಮಧುರೈ ತಮಿಳುನಾಡಿನ ಚಿಕ್ಕ ಪಟ್ಟಣ. ಬಾಂಬೆ, ಮದ್ರಾಸು, ದೆಹಲಿಗಳಂತೆ ಇಲ್ಲಿ ದೊಡ್ಡ ದೊಡ್ಡ ಕ್ರೀಡಾ ಸಂಕೀರ್ಣಗಳಾಗಲಿ ಅಥವಾ ತರಬೇತಿ ಕೇಂದ್ರಗಳಾಗಲಿ ಇಲ್ಲ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ತೀರಾ ವಿರಳ. ಹಾಗಂತ ರೇವತಿಯವರು ತಮ್ಮ ಕನಸನ್ನು ಎಂದೂ ಕೈಬಿಡಲಿಲ್ಲ. ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ.

ರೇವತಿ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟ ದುರಂತವನ್ನು ಎದುರಿಸಿದರು. ಅವರು ಮತ್ತು ಸಹೋದರಿ ಬಾಲ್ಯದಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ನಂತರ ಇಬ್ಬರು ಹೆಣ್ಣು ಮಕ್ಕಳ ಪೋಷಣೆಗೆ ನಿಂತಿದ್ದು ಮಧುರೈನಲ್ಲಿರುವ ರೇವತಿಯವರ ಅಜ್ಜಿ .  ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅವರ ಅಜ್ಜಿ ಅವರನ್ನು ಬೆಳೆಸಲು ಹೆಣಗಾಡಿದರು. ಮನೆಯಲ್ಲಿ ಬಡತನ, ವೃದ್ಧೆ ಅಜ್ಜಿ, ತಂದೆ ತಾಯಿಯರ ಸಾವು ಎಂತವರನ್ನೂ ಕಂಗೆಡೆಸದೇ, ಕುಗ್ಗಿಸದೇ ಇರಲಾರದು. ರೇವತಿ ಕಷ್ಟಗಳು ಎದುರಾದಷ್ಟು ಪುಟಿಯುತ್ತಲೇ ಹೋದರು. ಅವರ ಅಜ್ಜಿ ಮೊಮ್ಮಕ್ಕಳಿಗೆ  ಮತ್ತು ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ನೀಡಿದರು.

ಶಾಲೆಯ ದಿನಗಳಲ್ಲಿ ರೇವತಿ ವಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಎಲ್ಲರೂ ಮಕ್ಕಳಾಟ ಎಂದು ನಂಬಿದ್ದರೇ ವಿನ: ರೇವತಿ ಒಲಂಪಿಕ್‌ಗೆ ಆಯ್ಕೆಯಾಗುವ ಊಹೆಯನ್ನೂ ಮಾಡಿರಲಿಲ್ಲ. ಚಿಗುರೆಯಂತೆ ಓಡುವ ಪುಟ್ಟ ಹುಡುಗಿಯಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನು ಗುರುತಿಸಿದವರು ಕೋಚ್ ಕಣ್ಣನ್.

“ಇಬ್ಬರು ಹೆಣ್ಣು ಮಕ್ಕಳು ಐದು ವರ್ಷದವರಿದ್ದಾಗ  ನನ್ನ ಮಗಳು ಮತ್ತು ಸೊಸೆ ತೀರಿಕೊಂಡರು. ನಾನು ಅವರನ್ನು ಕರೆದುಕೊಂಡು ಹೋಗಿ ಶಿಕ್ಷಣ ನೀಡಿದೆ. ಶಾಲೆಯ ಕೋಚ್‌ ರೇವತಿ ಚೆನ್ನಾಗಿ ಓಡುತ್ತಾರೆ ಎಂದು ಮೆಚ್ಚಿ ಅವಳಿಗೆ ತರಬೇತಿ ಪ್ರಾರಂಭಿಸಲು ಹೇಳಿದರು. ನಾನು ಆರಂಭದಲ್ಲಿ ಹಿಂಜರಿಯುತ್ತಿದ್ದರೂ, ನಾನು ರೇವತಿಯನ್ನು ತರಬೇತಿಗೆ ಹೋಗಲು ಅನುಮತಿಸಿದೆ. ಈಗ ನನ್ನ ಮೊಮ್ಮಗಳು  ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ಮತ್ತು ಅವಳ ಸಾಧನೆಗೆ ಕಾರಣವಾದ, ಮಾರ್ಗದರ್ಶನವನ್ನು ನೀಡಿದ ಕೋಚ್‌ಗೆ ನಾನು ಧನ್ಯವಾದ ಹೇಳುತ್ತೇನೆ”” ಎಂದು ರೇವತಿಯರ ಅಜ್ಜಿ ಕೆ.ಅರ್ಮಲ್‌ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಕೆ.ಅರ್ಮಲ್‌ ಅವರ ಹಿರಿಯ ಮೊಮ್ಮಗಳಾದ ರೇವತಿ, ಇಬ್ಬರು ಹೆಣ್ಣುಮಕ್ಕಳಲ್ಲಿ ಮೊದಲನೆಯವಳು   ಟವನ್ನು ಪಡೆಯುವುದು ತುಂಬಾ ಕಷ್ಟ, ಅವರ ಅಜ್ಜಿ, ಹುಡುಗಿಯರನ್ನು ಸರ್ಕಾರಿ ಹಾಸ್ಟೆಲ್ನಲ್ಲಿ ಬಿಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅವರ ಎರಡನೆಯ ತರಗತಿಯಿಂದ ಹಿಡಿದು ಹನ್ನೆರಡನೇ ತರಗತಿ ಮುಗಿಸುವವರೆಗೆ, ಸಹೋದರಿಯರು ಹಾಸ್ಟೆಲ್‌ನಲ್ಲಿಯೇ ಉಳಿದು ತಮ್ಮ ಶಿಕ್ಷಣವನ್ನು ಮುಂದುವರೆಸಿದರು.

ಅಲ್ಲಿಂದ ರೇವತಿ ಮತ್ತೆ ಹಿಂತಿರುಗಿ ನೋಡಲಿಲ್ಲ. 2016 ರಲ್ಲಿ ನಡೆದ ರಾಷ್ಟ್ರೀಯ ಜ್ಯನಿಯರ್‌ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ನಲ್ಲಿ 100 ಮೀ ಮತ್ತು 200 ಮೀ. ಎರಡರಲ್ಲೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ನಂತರ ಸೀನಿಯರ್ ಶಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದರು. ರೇವತಿಯವರ ಪ್ರತಿಭೆಗೆ ದೇಶದ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆ ಪಟಿಯಾಲಾದ ಭಾರತೀಯ ರಾಷ್ಟ್ರೀಯ ಅಥ್ಲೆಟಿಕ್‌ ಶಾಲೆಯಲ್ಲಿ ಅವಕಾಶ ದೊರೆಯಿತು.

2019 ರಲ್ಲಿ ಅವರು ದಕ್ಷಿಣ ರೈಲ್ವೆಯ ಮಧುರೈ ವಿಭಾಗದಲ್ಲಿ ಟಿಕೆಟ್ ಪರೀಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಅಜ್ಜಿ ಕೆ. ಅರ್ಮುಲ ಆರೋಗ್ಯ ಬಿಗಡಾಯಿಸಿದಾಗ ದೂರದ ಪಟಿಯಾಲದಲ್ಲಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ ಹಾಗಾಗಿ ಮಧುರೈನಲ್ಲಿ ರೈಲ್ವೆ ಕೆಲಸಕ್ಕೆ ಸೇರಿಕೊಂಡೆ ಎನ್ನುತ್ತಾರೆ ಯುವ ಕ್ರೀಡಾಪಟು ರೇವತಿ ವೀರಮಣಿ.

2020 ರ ನವೆಂಬರ್‌ನಲ್ಲಿ ಮೊಣಕಾಲು ನೋವು ತೀವ್ರವಾಗಿ ಬಾಧಿಸಿತು. ನೋವು ಮತ್ತಷ್ಟು ಉಲ್ಬಣಗೊಂಡು ಒಂದು ದಿನ ಓಟವನ್ನೇ ನಿಲ್ಲಿಸಬೇಕೆಂದುಕೊಂಡೆ. ತಿಂಗಳುಗಳ ಕಾಲ ಟ್ರ್ಯಾಕ್‌ನಿಂದ ದೂರ ಉಳಿದೆ. 6 ತಿಂಗಳು ಬೆಡ್‌ ರೆಸ್ಟ್‌ನಲ್ಲಿದ್ದು  ಫಿಸಿಯೋ ಸಿಮೋನಿ ಷಾ ಅವರಿಂದ ಚಿಕಿತ್ಸೆ ಪಡೆದೆ. ನನ್ನ ಕ್ರೀಡಾ ಬದುಕಿನ ಅತ್ಯಂತ ಕಠಿಣ ದಿನಗಳು ಅವು. ಸುಮಾರು 6 ತಿಂಗಳ ನಂತರ  ಚೇತರಿಸಿಕೊಂಡು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅಲ್ಲಿನ ಗೆಲುವು ನನಗೆ ಮರು ಜೀವ ನೀಡಿತು. ಒಲಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ 400 ಮೀಟರ್‌ ಓಟವನ್ನು 53.55 ಸೆಕೆಂಡುಗಳಲ್ಲಿ ಮುಗಿಸಿದೆ. ಇದು ನನ್ನ ಇದುವರೆಗಿನ ಅತ್ಯುತ್ತ ದಾಖಲೆ. ಒಲಂಪಿಕ್ ಅರ್ಹತೆ ನನ್ನ ಜೀವನದ ಹಿಂದಿನ ದಿನಗಳ ಕಷ್ಟಗಳನ್ನು ಮರೆಸಿದೆ. ನನಗಿಂತಲೂ 76 ವರ್ಷ ವಯಸ್ಸಿನ ನನ್ನ ಅಜ್ಜಿ ಈ ಸಾಧನೆಯಿಂದ ಸಂತೋಷಗೊಂಡಿದ್ದಾರೆ.

2020 ರ ಅಂತ್ಯ ಮತ್ತು 2021 ರ ಆರಂಭ ರೇವತಿಯ ಕ್ರೀಡಾ ಜೀವನದ ಅತ್ಯಂತ ಕಠಿಣ ದಿನಗಳು. ಆದಿನಗಳಲ್ಲಿ ಅವರು ಅನುಭವಿಸಿದ ನೋವು ಮತ್‌ತು ಮಾನಸಿಕ ಖಿನ್ನತೆಯನ್ನು ರೇವತಿ ಈ ರೀತಿಯಾಗಿ ಹಂಚಿಕೊಳ್ಳುತ್ತಾರೆ.

ತಮ್ಮ ಕ್ರೀಡಾ ಜೀವನದ ಆರಂಭದಲ್ಲಿ ಇದ್ದ ಸೌಲಭ್ಯದ ಕೊರತೆ, ಆರ್ಥಿಕ ಬಡತನಗಳನ್ನು ಮೆಟ್ಟಿನಿಂತ ರೇವತಿ ಒಲಂಪಿಕ್‌ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿಸುವ ಸ್ಪೂರ್ತಿಯುತ ಮಾತನಾಡುತ್ತಾರೆ. ಪರಿಶ್ರಮದ ಹಿಂದೆ ಯಶಸ್ಸು ಹೇಗೆ ಬೆನ್ನತ್ತುತ್ತದೆ ಎಂಬುದಕ್ಕೆ ರೇವತಿ ವೀರಮಣಿ ಜೀವಂತ ಉದಾಹರಣೆ.

“ಈ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿವೆ, ತರಬೇತಿ ಮತ್ತು ಶಾಲಾ ಶಿಕ್ಷಣವು ಉಚಿತವಾಗಿದೆ ಮತ್ತು  ಸರ್ಕಾರವೇ ಎಲ್ಲವನ್ನೂ ನೋಡಿಕೊಳ್ಳುತ್ತದೆ. ನಮ್ಮ ದಿನಗಳಲ್ಲಿ, ಈ ಬಗ್ಗೆ ನಮಗೆ ಹೆಚ್ಚು ತಿಳಿದಿರಲಿಲ್ಲ. ನಮ್ಮ ಸಾಮರ್ಥ್ಯದ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನ ನೀಡುವುದು  ಅತ್ಯಂತ ಮುಖ್ಯವಾದ ಭಾಗವಾಗಿದೆ – ಪರಿಶ್ರಮದ ಹಿಂದೆ ಪ್ರಾಯೋಜಕರು, ತರಬೇತಿ ಮತ್ತು ಬೆಂಬಲ ಸೌಲಭ್ಯಗಳೆಲ್ಲವೂ ಅನುಸರಿಸುತ್ತವೆ ”, ಎಂದು ರೇವತಿ ಅಭಿಪ್ರಾಯಪಡುತ್ತಾರೆ.

23 ವರ್ಷದ ರೇವತಿ ವೀರಮಣಿ ಜುಲೈ 26 ರಿಂದ ಆರಂಭವಾಗುವ ಟೋಕಿಯೊ ಒಲಂಪಿಕನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದು ಬರಲಿ ಎಂಬುದೊಂದೇ ನಮ್ಮ ಹಾರೈಕೆ. ಬಡತನದ ಬೆಂಕಿಯಲ್ಲಿ ಬೆಂದು, ಕುಟುಂಬಕ್ಕಾಗಿ ರೈಲ್ವೆಯಲ್ಲಿ ಕೆಲಸಮಾಡುತ್ತ ಒಲಂಪಿಕ್‌ಗೆ ಅವಕಾಶ ಗಿಟ್ಟಿಸಿದ 23 ವರ್ಷದ ರೇವತಿ ವೀರಮಣಿ ಅವರ ಬದುಕು ಮತ್ತು ಸಾಧನೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ.  ಹೆಚ್ಚು ಹೆಚ್ಚು ಕ್ರೀಡಾಪಟುಗಳು ಒಲಂಪಿಕ್ ಅಂಗಳದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕವನ್ನು ಗೆದ್ದು ಬರಲಿ.

About vijay_shankar

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.