ಕಾರವಾರ : ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸರಸ್ವತಿ ಸುತಾರ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು. ಹೆಂಡತಿಯ ಈ ವರ್ತನೆಯಿಂದ ಬೇಸತ್ತಿದ್ದ ಪತಿ ಅಂಕುಷರಾಮಾ ಪತ್ನಿಗೆ ಮೊಬೈಲ್ ನಲ್ಲಿ ಹರಟದಂತೆ ಬುದ್ದಿ ಹೇಳಿದ್ದನು. ಇದರಿಂದ ಕೋಪಗೊಂಡ ಈಕೆ ತನ್ನ ಪರಿಚಯ ಹೊಂದಿದ್ದ ಗಣೇಶ ಶಾಂತರಾಂ ಎಂಬುವವನಿಗೆ 30 ಸಾವಿರ ಸುಪಾರಿ ನೀಡಿ ಹತ್ಯೆ ಮಾಡುವಂತೆ ತಿಳಿಸಿದ್ದಳು.
ಗಣೇಶ ಶಾಂತರಾಂ ಇಬ್ಬರು ಅಪ್ರಾಪ್ತ ಬಾಲಕರೊಂದಿಗೆ ಇಂದು ಮನೆಗೆ ಆಗಮಿಸಿದ್ದು ಮನೆಯಲ್ಲಿದ್ದ ಅಂಕುಷ ರಾಮಾ ಸುತಾರ ನನ್ನು ಕತ್ತು ಹಿಸುಕಿ ಕೊಲೆ ಮಾಡಲು ಎತ್ನಿಸಿದ್ದು, ಈತ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿ ಇದ್ದ ಸಹೋದರರು ಓಡಿ ಬಂದಿದ್ದಾರೆ. ಈ ವೇಳೆ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ. ಘಟನೆ ಸಂಬಂಧ ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂ ಪಾಟೀಲ್ ನನ್ನು ಬಂಧಿಸಿದ್ದಾರೆ.