ಹುನಗುಂದ: ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ಇಂದು ತನ್ನ ಪ್ರಿಯ ಗಂಡನ ಮನೆಯಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಸಿಟ್ಟಿಗೆದ್ದ ಮೃತಳ ಪೋಷಕರು ಮಗಳ ಎರಡನೇ ಗಂಡನ ಮನೆಗೆ ಬೆಂಕಿ ಇಟ್ಟಿದ್ದಾರೆ.

ಇಂತಹ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೆಲೂರಿನಲ್ಲಿ ಸಂಭವಿಸಿದ್ದು, ನೂರಾರು ಜನರ ಕಣ್ಣೆದುರಲ್ಲೇ ಮನೆ ಹೊತ್ತಿ ಉರಿದಿದೆ. ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಯುವತಿ ಬಸಮ್ಮ ಮಾದರ ಮತ್ತು ರಂಜಿತ್ ಕೊಂಚನವರ ಪರಸ್ಪರ ಪ್ರೀತಿಸುತ್ತಿದ್ದರು. ಆದರೂ ಯುವತಿಯ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಗಂಡನಿಗೆ ಬಸಮ್ಮಳ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿ ಜಗಳ ನಡೆದು ಇಬ್ಬರ ವೈವಾಹಿಕ ಜೀವನ ಮುರಿದುಬಿದ್ದಿತ್ತು. ಕೊನೆಗೆ ಪ್ರಿಯಕರ ರಂಜಿತ್ ಜತೆ ಬಸಮ್ಮಗೆ ಮದುವೆ ಮಾಡಲಾಗಿತ್ತು.
ಆದರೆ, ರಂಜಿತ್ ಮತ್ತು ಬಸಮ್ಮರದ್ದು ಅಂತರ್ಜಾತಿ ವಿವಾಹ. ಹಾಗಾಗಿ ರಂಜಿತ್ ಕುಟುಂಬಸ್ಥರ ಜತೆ ಇರದೆ ಪ್ರತ್ಯೇಕವಾಗಿ ಪತ್ನಿ ಜತೆ ವಾಸವಿದ್ದ. ಶುಕ್ರವಾರ ಬೆಳಗ್ಗೆ ಬಸಮ್ಮಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಸಾವಿಗೆ ಅಳಿಯ ರಂಜಿತ್ ಮತ್ತು ಅವನ ಕುಟುಂಬಸ್ಥರೇ ಕಾರಣ ಎಂದು ರೊಚ್ಚಿಗೆದ್ದ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಬಂದ ಹುನಗುಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News