ಸಕಲೇಶಪುರ: ತಹಶೀಲ್ದಾರ್ ಅವರು ತನ್ನ ಕಾರಿನ ನಾಲ್ಕೂ ಚಕ್ರಗಳ ಗಾಳಿ ಬಿಟ್ಟು ಅನ್ಯಾಯ ಮಾಡಿದ್ದು, ನ್ಯಾಯಬೇಕು ಎಂದು ಆಗ್ರಹಿಸಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಒಬ್ಬರು ಸಮವಸ್ತ್ರದಲ್ಲಿಯೇ ಗಾಂಧಿ ಫೋಟೊ ಹಿಡಿದು ರಸ್ತೆಯಲ್ಲಿಯೇ ಧರಣಿ ನಡೆಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
‘ಮೆಡಿಕಲ್ ಶಾಪ್ ಒಂದರ ಮುಂದೆ ಕಾರು ನಿಲ್ಲಿಸಿ ಔಷಧಿ ಖರೀದಿ ಮಾಡಿಕೊಂಡು ಬರುವಷ್ಟರಲ್ಲಿ ತಹಶೀಲ್ದಾರ್ ಕಾರಿನ ಚಕ್ರಗಳಿಂದ ಗಾಳಿ ತೆಗೆದಿದ್ದಾರೆ. ಹೇಳಿದ್ದರೆ ತಾನೇ ಕಾರನ್ನು ಅಲ್ಲಿಂದ ತೆಗೆಯುತ್ತಿದ್ದೆ. ಇಲ್ಲವೇ ಕಾನೂನು ಪ್ರಕಾರ ದಂಡ ಕಟ್ಟುತ್ತಿದ್ದೆ. ಆರೋಗ್ಯ ಸರಿ ಇಲ್ಲದ ನನಗೆ ಅನ್ಯಾಯ ಮಾಡಿ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ. ನ್ಯಾಯಬೇಕು ಎಂದು ಧರಣಿ ಕುಳಿತಿದ್ದಾಗಿ’ ದಯಾನಂದ್ ಸುದ್ದಿಗಾರರಿಗೆ ಹೇಳಿದರು.
ಧರಣಿ ಕುಳಿತ ವಿಷಯ ತಿಳಿಯುತ್ತಿದ್ದಂತೆ ಠಾಣೆಯಿಂದ ಸಹೋದ್ಯೋಗಿಗಳು ಸ್ಥಳಕ್ಕೆ ತೆರಳಿ ಅವರನ್ನು ಸಮಾಧಾನಪಡಿಸಿ ಠಾಣೆಗೆ ಕರೆದುಕೊಂಡು ಬಂದರು ಎನ್ನಲಾಗಿದೆ.
‘ರಸ್ತೆ ನಿಯಮ ಉಲ್ಲಂಘಿಸಿ ಕಾರು ನಿಲ್ಲಿಸಲಾಗಿತ್ತು. ಇದರಿಂದ ವಾಹನದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಕಾರು ಯಾರು ನಿಲ್ಲಿಸಿರುವುದು ಎಂದು ಕೇಳಿದರೆ ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಚಕ್ರಗಳಿಂದ ಗಾಳಿ ತೆಗೆಯಬೇಕಾಯಿತು. ನಿಯಮ ಉಲ್ಲಂಘನೆ ಮಾಡಿದವರು ಯಾರೇ ಆದರೂ ತಪ್ಪು ತಪ್ಪೇ’ ತಹಶೀಲ್ದಾರ್ ಮಂಜುನಾಥ್ ಹೇಳಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News