ಪಣಜಿ: ಭಾರಿ ಮಳೆಯಿಂದಾಗಿ ಗೋವಾ- ಕರ್ನಾಟಕ ನಡುವಿನ ಘಾಟಿಯಲ್ಲಿ ಎರಡು ಪ್ರತ್ಯೇಕ ಭೂ ಕುಸಿತ ಸಂಭವಿಸಿದ್ದು, ರೈಲು ಮತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಭೂಕುಸಿತದಿಂದಾಗಿ, ಬುಧವಾರ ಮುಂಜಾನೆ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣವನ್ನು ತಲುಪಬೇಕಿದ್ದ ಹಜ್ರತ್ ನಿಜಾಮುದ್ದೀನ್ ರೈಲು ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಕ್ಕೆ ತೆರಳಿದೆ. ಅಲ್ಲಿಂದ ನಿಗದಿತ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರಿಗೆ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.

ಚೋರ್ಲಾ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತವು ಗೋವಾ ಮತ್ತು ಕರ್ನಾಟಕ ನಡುವಿನ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು.
‘ಚೋರ್ಲಾ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣು ತೆರವು ಕಾರ್ಯ ಮುಗಿಯುವವರೆಗೂ, ಈ ರಸ್ತೆಯ ಮೂಲಕ ಪ್ರಯಾಣಿಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ’ ಎಂದು ಗೋವಾದ ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.